Wednesday, January 28, 2015

ರಾಜಾ ಪ್ರತ್ಯಕ್ಷ ದೇವತಾ

ಇದೇನು ಪ್ರಜಾಪ್ರಭುತ್ವದಲ್ಲಿ ರಾಜಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಗಾಬರಿಪಡುವ ಅಗತ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತದ ಮೂಲಸ್ಥಾನದಲ್ಲಿರುವವರು ಸರಿಯಾಗಿದ್ದರೆ ಪ್ರಜೆಗಳಿಗೆ ಹೇಗೆ ಉಪಯೋಗವಾಗುತ್ತದೆ ಎಂಬುದನ್ನು ತಿಳಿಸಲು ಒಂದು ದೃಷ್ಟಾಂತ ಸಿಕ್ಕಿತು. ಅದರ ಬಗ್ಗೆ ಈ ಲೇಖನ. 

ಕರ್ನಲ್ ಜಿ. ಪ್ರತಾಪ್ ರಾಜು (ಮೊಬೈಲ್ ಸಂಖ್ಯೆ +೯೧ ೮೬೦೭೦ ೫೧೩೩೩) ಅವರ ಮಾತುಗಳಲ್ಲೇ ಓದಿ:
"ಇತ್ತೀಚೆಗೆ ನಡೆದ ಎರಡು ಘಟನೆಗಳ ಬಗ್ಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ನನ್ನ ತಂದೆ ಐದು ತಿಂಗಳ ಹಿಂದೆ ಅವರ ೯೪ರ ವಯಸ್ಸಿನಲ್ಲಿ ಕಾಲವಾದರು. ನನ್ನ ತಂದೆಯವರು ೧೯೭೫ರಲ್ಲಿ ನಿವೃತ್ತಿ ಹೊಂದಿದರು. ಅವರು ಸೂಪರಿಡೆಂಟ್ ಇಂಜಿನಿಯರ್ ಆಗಿ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರು ಹಾಗೂ ಕೇಂದ್ರ ಸರ್ಕಾರದಿಂದ (ಮಾಸಿಕ ಸುಮಾರು ೪೦ ಸಾವಿರ) ಪಿಂಚಣಿ ಪಡೆಯುತ್ತಿದ್ದರು. ೨೦೧೦ರಲ್ಲಿ ಪಿಂಚಣಿ ಆಯೋಗಕ್ಕೆ ತಮ್ಮ ಪತ್ನಿಯಾದ ಶ್ರೀಮತಿ ಶಾರದಾ (ಈಗ ೮೯ ವರ್ಷ ವಯಸ್ಸು) ಅವರ ಹೆಸರನ್ನು ತಮ್ಮ ನಂತರ ಪಿಂಚಣಿ ಪಡೆಯುವ ಉದ್ದೇಶದಿಂದ ಪಿಂಚಣಿಗೆ ಸೇರಿಸಲು ಅರ್ಜಿ ಸಲ್ಲಿಸಿದರು. ೨೦೧೨ರಲ್ಲಿ ನನ್ನ ತಂದೆ ದೃಷ್ಟಿ ಸಮಸ್ಯೆಗೆ ಒಳಗಾದಾಗ ನಾನು ಮತ್ತೆ ಪಿಂಚಣಿ ಆಯೋಗದೊಂದಿಗೆ ಇ-ಮೇಲ್ ಸಂವಾದ ನಡೆಸಿದರೆ ಸಿಕ್ಕ ಉತ್ತರ 'ಆದಷ್ಟು ಬೇಗ ಆ ಕೆಲಸವನ್ನು ಮುಗಿಸುತ್ತೇವೆ' ಎಂದು. ೨೦೧೪ ಬಂದರೂ ನಮ್ಮ ತಂದೆಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ, ತಮ್ಮ ಪತ್ನಿಯ ಹೆಸರು ಸೇರ್ಪಡೆಯೂ ಆಗಿರಲಿಲ್ಲ. ಈ ನೋವಿನೊಂದಿಗೇ ನಮ್ಮ ತಂದೆ ನಮ್ಮನ್ನು ಅಗಲಿದರು.
ಇದೇ ವಿಷಯವಾಗಿ ನಮ್ಮ ತಂದೆಯ ಮರಣ ದಾಖಲೆಗಳನ್ನು ತೆಗೆದುಕೊಂಡು ಮತ್ತೆ ನಾನು ಬ್ಯಾಂಕ್‍ಗೆ ಎಡೆತಾಕಿದಾಗ ಸಿಕ್ಕಿದ್ದು ಸಹ ಅದೇ ಉತ್ತರ; ನಿಮ್ಮ ತಾಯಿಯ ಹೆಸರು ಸೇರ್ಪಡೆಯಾಗಿಲ್ಲ. ಬೇಸರದಿಂದಲೇ ೨೦೧೦ರಿಂದ ನಡೆದ ಎಲ್ಲಾ ಸಂವಾದಗಳನ್ನೂ ಒಟ್ಟುಗೂಡಿಸಿ ಪಿಂಚಣಿ ಆಯೋಗಕ್ಕೆ ಕಳುಹಿಸಿದೆ. ಕೇವಲ ನಾಲ್ಕು ದಿನಗಳಲ್ಲೇ 'ಒಂದು ವಾರದಲ್ಲಿ ಈ ದಾಖಲೆಗಳನ್ನು ಒದಗಿಸುತ್ತೇವೆ' ಎಂದು ಆಯೋಗದಿಂದ ಉತ್ತರ ಬಂತು (ಶೀಘ್ರದಲ್ಲಿ ಎನ್ನುವುದಕ್ಕೂ, ಒಂದು ವಾರ ಎನ್ನುವುದಕ್ಕೂ ಎಷ್ಟು ಅಂತರ!!). ಅದಾದ ೫ನೇ ದಿನಕ್ಕೆ ನನಗೆ ಒಂದು ಕರೆ ಬಂತು. ಡಾ॥ ಜಿತೇಂದರ್ ಸಿಂಗ್ ಎಂದು ಪರಿಚಯ ಮಾಡಿಕೊಂಡ ಅವರು 'ನಿಮ್ಮ ತಾಯಿಯವರ ಹೆಸರಿನೊಂದಿಗೆ ಅವಶ್ಯವಾದ ದಾಖಲೆಗಳನ್ನು ಬ್ಯಾಂಕ್‍ಗೆ ಕಳುಹಿಸಲಾಗಿದೆ' ಎಂದು ಹೇಳಿದರು. ಧನ್ಯವಾದದೊಂದಿಗೆ ನಮ್ಮ ದೂರವಾಣಿ ಸಂಭಾಷಣೆ ಮುಗಿಸಿದ ನಂತರ ಡಾ॥ ಜಿತೇಂದರ್ ಸಿಂಗ್ ಯಾರೆಂದು ಹುಡುಕಿದರೆ ಅವರು ಪಿಂಚಣಿ ಆಯೋಗದ ರಾಜ್ಯ ಸಚಿವರು!
ಮೋದಿಯವರ ಸಂಪುಟದಲ್ಲಿ ರಾಜ್ಯ ಸಚಿವರಾದ ಅವರಿಗೆ ಮತ್ತೆ ಕರೆ ಮಾಡಿ ಈ ಬಗ್ಗೆ ಕೇಳಿದರೆ 'ಪ್ರಧಾನಿ ಮೋದಿಯವರಿಂದ ಸಚಿವಾಲಯಕ್ಕೆ ಆದೇಶ ಬಂದಿದೆ. ಯಾವ ಕಾರಣಕ್ಕೂ ಯಾವುದೇ ವಿಧವೆಗೂ ಪಿಂಚಣಿ ದಾಖಲಾತಿಗಳು ಮತ್ತಿತರ ವಿಷಯಗಳಿಂದ ತೊಂದರೆಯಾಗಬಾರದು' ಎಂದು ಸಮಾಧಾನದಿಂದ ಹೇಳಿದರು. 

ಕಳೆದ ತಿಂಗಳು ನಮ್ಮ ತಾಯಿಯವರು ಒಂದು ಪ್ರಮಾಣ ಪತ್ರ (life certificate)ವನ್ನು ಬ್ಯಾಂಕ್‍ಗೆ ಸಲ್ಲಿಸಬೇಕಿತ್ತು. ಬ್ಯಾಂಕ್‍ ಅಧಿಕಾರಿಯೊಬ್ಬರು ನಮ್ಮ ಮನೆಗೇ ಬಂದು ತಾಯಿಯವರ ಸಹಿಯನ್ನು ಪಡೆದರು. (ಕಳೆದ ವರ್ಷ ೯೩ ವಯಸ್ಸಿನ ನಮ್ಮ ತಂದೆಯನ್ನು ತುಂಬಾ ಕಷ್ಟಪಟ್ಟು ಬ್ಯಾಂಕ್ ಬಳಿಗೆ ಕರೆದೊಯ್ದಿದ್ದೆ). ಬ್ಯಾಂಕ್‍ ಅಧಿಕಾರಿ ಸಹ 'ಹಿರಿಯ ನಾಗರಿಕರನ್ನು ಹೆಚ್ಚು ಸೌಜನ್ಯದಿಂದ ನಡೆಸಿಕೊಳ್ಳುವಂತೆ ಹಣಕಾಸು ಮಂತ್ರಾಲಯದಿಂದ ಆದೇಶ ಬಂದಿದೆ' ಎಂದು ಹೇಳಿದರು."

ರಾಜಾ ಪ್ರತ್ಯಕ್ಷ ದೇವತಾ ಎಂಬ ಶೀರ್ಷಿಕೆ ಹೊಂದುತ್ತದೆ ಅಲ್ಲವೇ...

No comments: