Friday, July 29, 2016

ಬೇಕಿದೆ - ಸಮಗ್ರ ಕರ್ನಾಟಕದ ಅರಿವು

ರಾಜಕೀಯ ಹಿತಾಸಕ್ತಿಗಳನ್ನು ಮರೆತು ಹೋರಾಡುವ ರಾಜಕಾರಣಿಗಳು ನಮಗೆ ಸಿಗುವುದಿಲ್ಲ. ನಮ್ಮ ಸಮಸ್ಯೆಗೆ ಮನಃಪೂರ್ವಕವಾಗಿ ವಾದ ಮಂಡಿಸುವವರೂ ನಮ್ಮಲ್ಲಿಲ್ಲ. ಜನರ ಸಮಸ್ಯೆಗಳಿಗೆ ಜನರೇ ಒಂದಾಗಿ ಹೋರಾಡಬೇಕಾದ ಅನಿವಾರ್ಯತೆ ನಮಗಿದೆ. ಸಮಗ್ರ ಕರ್ನಾಟಕ ಎಂಬುದೇ ನಾವು ಮರೆಯುತ್ತಿದ್ದೇವೆ. ಮಹದಾಯಿ ಎಂದರೆ ಉತ್ತರ ಕರ್ನಾಟಕ ಸಮಸ್ಯೆ, ಕಾವೇರಿ ಎಂದರೆ ದಕ್ಷಿಣ ಕರ್ನಾಟಕದ್ದು, ಅರ್ಕಾವತಿ ಬಗ್ಗೆ ಮಾತಾಡಿದರೆ ಬೆಂಗಳೂರು / ಗ್ರಾಮಾಂತರ / ರಾಮನಗರ ಜಿಲ್ಲೆಗಳದ್ದು ಎಂಬ ಮನಸ್ಥಿತಿ ಇರುವವರೆಗೂ ಗೆಲುವು ನಮ್ಮದಲ್ಲ.

--------------------------------------------------------------------------------------------------------------------------

ವಿಶ್ವವಾಣಿ ಲೇಖನ - ಪ್ರತಾಪ್ ಸಿಂಹ - ಸಂಸದರು


----- ------ -------
ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ನಮ್ಮ ವಿರುದ್ಧವಾಗಿದೆ..!? ಕರ್ನಾಟಕ ನೆಲ, ಜಲ, ನದಿ, ವನಗಳ ಬಗ್ಗೆ ಕಾಳಜಿ ಇಟ್ಟುಕೊಂಡ ಒಬ್ಬ ವಕೀಲನಾಗಿ ನನಗನಿಸಿದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತಿದ್ದೇನೆ.
ಕಾವೇರಿ ನ್ಯಾಯಾಧಿಕರಣವಾಗಲಿ, ಮಹದಾಯಿ ನ್ಯಾಯಾಧಿಕರಣವಾಗಲಿ ಅಥವ ಸುಪ್ರೀಂ ಕೋರ್ಟ್ ಅಥವ ಯಾವುದೇ ಹೈಕೋರ್ಟುಗಳಲ್ಲಿ ಸಹಜವಾಗಿ ಸದಾ ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿ ಯಾಕೆ ತೀರ್ಪು ಬರುತ್ತೆ? ಎನ್ನುವುದನ್ನು ಪರಾಮರ್ಶಿಸಿ ನೋಡಿ.. ನಿಮಗೆ ಸತ್ಯ ದರ್ಶನವಾಗುತ್ತದೆ.
ಕಾವೇರಿ ವಿಷಯ ತೆಗೆದುಕೊಳ್ಳಿ ಎಂದಾದರೂ ನಮ್ಮ ವಕೀಲರು ಸಮರ್ಪಕವಾಗಿ ವಾದ ಮಂಡಿಸಿದ್ದಾರೆಯೆ..? ನ್ಯಾಯಾಲಯ ಕೇಳಿದ ದಾಖಲೆಗಳನ್ನು ನೀಡಿದ್ದಾರೆಯೆ? ಪ್ರತಿ ಸರ್ಕಾರ ಬಂದಾಗಲೂ ವಕೀಲರು ಬದಲಾಗುತಿರುತ್ತಾರೆ.. ನಮ್ಮ ಪರ ವಾದ ಮಾಡುವವರು ಸದಾ ಕರ್ನಾಟಕದವರಲ್ಲದ ವಕೀಲರೆ..!? ತಮಿಳುನಾಡಿನ ಪರ ಸದಾ ಪರಾಷರನ್ ಎಂಬ ಹಿರಿಯ ಮುತ್ಸದ್ದಿಯೇ ವಾದಿಸುತ್ತಾರೆ. ಯಾವುದೇ ಸರ್ಕಾರವಿದ್ದರೂ ಕಾವೇರಿ ವಿಷಯ ಬಂದಾಗ ಇವರೇ ಶಾಶ್ವತ ವಕೀಲರು! ರಾಜ್ಯದ ಹಿತಾಸಕ್ತಿ ಬಂದಾಗ ಪರಾಷರನ್ ತಮ್ಮ ರಾಜ್ಯಕ್ಕಾಗಿ ಕಾಳಜಿಯಿಂದ ವಾದಿಸಿದರೆ ನಮ್ಮ ಹೊರರಾಜ್ಯ ವಕೀಲರು ಕೇವಲ ದುಡ್ಡಿಗಾಗಿ ವಾದಿಸುತ್ತಾರೆ!! ತಮಿಳುನಾಡಿನ ಅಧಿಕಾರಿಗಳು ಎಲ್ಲಾ ದಾಖಲಾತಿಗಳನ್ನು ವ್ಯವಸ್ಥಿತವಾಗಿ ತಮ್ಮ ವಕೀಲರಿಗೆ ಒದಗಿಸಿದರೆ ನಮ್ಮವರು ಕಾಟಾಚಾರಕ್ಕೆ ಬಂದವರಂತಿರುತ್ತಾರೆ! ನಮ್ಮ ವಕೀಲರು ಆಗಾಗ ಬದಲಾಗುವುದರಿಂದ ಸಮಸ್ಯೆಯ ಆಳ ಅವರ ಅರಿವಿಗೆ ಪರಿಚಯವಾಗಿರುವುದೇ ಇಲ್ಲ. ಈ ಎಲ್ಲದರಿಂದಾಗಿ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸಲಾರದೆ, ದಾಖಲಾತಿಗಳನ್ನು ಒದಗಿಸಲಾರದೆ ಹಿಮ್ಮೆಟ್ಟುತಿದ್ದೇವೆ. ಈ ಸತ್ಯ ಅರಿಯದ ನಾವು ನ್ಯಾಯಾದಿಕರಣಗಳನ್ನು ದೂರುತ್ತೇವೆ.
ಈಗಿನ ಮಹದಾಯಿ ಮಧ್ಯಂತರ ತೀರ್ಪನ್ನೇ ನೋಡಿ.. ನ್ಯಾಯಾಧಿಕರಣಗಳು ಪಟ್ಟಿ ಮಾಡಿರುವ ನಮ್ಮ ದೌರ್ಬಲ್ಯಗಳನ್ನು ಗಮನಿಸಿ..
೧. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಯೋಜನಾ ವರದಿ ಹಾಗೂ ತಾಂತ್ರಿಕ ಸಾದ್ಯಾಸಾದ್ಯತಾ ವರದಿಯನ್ನು ನ್ಯಾಯಾದಿಕರಣಕ್ಕೆ ಸಲ್ಲಿಸಿಲ್ಲ.
೨. ಪರಿಸರ ಇಲಾಖೆಯ ಅನುಮೋದನೆಯನ್ನೇ ಪಡೆಯದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಆಕ್ಷೇಪಾರ್ಹ.
೩. ನೀರು ಪಡೆಯುವ ಸಂದರ್ಭದಲ್ಲಿ ಬರಗಾಲ ಇದೆ ಎನ್ನುವುದನ್ನು ಕರ್ನಾಟಕ ಹೇಗೆ ಸಾಬೀತುಪಡಿಸುತ್ತದೆ? ಮಳೆಯನ್ನು ಆಧರಿಸಿಯೋ ಅಥವಾ ಡ್ಯಾಂನಲ್ಲಿ ನೀರಿನ ಪ್ರಮಾಣವನ್ನು ಗಮನಿಸಿಯೋ ಎನ್ನುವುದು ಸ್ಪಷ್ಟವಾಗಿಲ್ಲ.
೪. ಹೆಚ್ಚುವರಿ ನೀರಿನ ಲಭ್ಯತೆ ಇದೆ ಎನ್ನುವುದನ್ನು ಸಾಬೀತುಪಡಿಸಲು ಅಗತ್ಯ ಸಾಕ್ಷಾಧಾರಗಳನ್ನು ಒದಗಿಸಿಲ್ಲ.
೫. ತಿರುವು ಯೋಜನೆಯ ಸಾಧಕ-ಬಾದಕಗಳ ಕುರಿತು ವೈಙ್ನಾನಿಕ ಅಧ್ಯಯನ ನಡೆಸಿಲ್ಲ. 
ಈಗ ಹೇಳಿ ನ್ಯಾಯಾಧಿಕರಣದ ತೀರ್ಪು ಯಾವ ಕಾರಣದಿಂದಾಗಿ ನಮ್ಮ ವಿರುದ್ದವಾಯಿತು..? ಇದಕ್ಕೆ ನೇರ ಹೊಣೆ ಸರ್ಕಾರ ಮತ್ತು ನಮ್ಮ ಕಾನೂನು ಪಂಡಿತರಲ್ಲವೆ..?
ರಾಜ್ಯವೊಂದಕ್ಕೆ ತನ್ನ ನೆಲ,ಜಲ,ನದಿ,ಕಾನನಗಳನ್ನು ಕಾಪಾಡಿಕೊಳ್ಳುವ ಬಗ್ಗೆ ಕನಿಷ್ಟ ಕಾಳಜಿ, ಅವನ್ನು ನಾಡಗಾಗಿ ಉಳಿಸಬೇಕಾದ ಇಚ್ಛಾಶಕ್ತಿಗಳಿಲ್ಲದಿದ್ದರೆ ಜನನಾಡಿಗೆ ಇಂತಹ ಕಷ್ಟ ತಪ್ಪಿದ್ದಲ್ಲ. ಅದು ಯಾವುದೇ ಪಕ್ಷದ ಸರ್ಕಾರವಾಗಿರಲಿ.. ಎಲ್ಲರಿಗೂ ಅನ್ವಯಿಸುತ್ತೆ.. ಇದು ನಮ್ಮ ನಾಚಿಕೆಗೇಡು..
-ಸಿ.ಎಸ್.ದ್ವಾರಕಾನಾಥ್, ವಕೀಲರು (ಕನ್ನಡಪ್ರಭ ಲೇಖನ)