Sunday, April 5, 2015

ಅಡುಗೆ ಅನಿಲ ಸಬ್ಸಿಡಿ ನಮಗೆ ಅಗತ್ಯವೇ?

ನಮ್ಮ ದೇಶದಲ್ಲಿ ಈಗ್ಗೆ ೧೬ ಕೋಟಿ ಅಡುಗೆ ಅನಿಲ ಸಂಪರ್ಕಗಳಿವೆ. ಎಲ್ಲ ಸಂಪರ್ಕಗಳಿಗೂ ಇದುವರೆಗೂ ಸಬ್ಸಿಡಿ ದರದಲ್ಲೇ ಸಿಲಿಂಡರ್‍ಗಳನ್ನೂ ಪೂರೈಸಲಾಗುತ್ತಿದೆ. ಈಗ ಆ ಸಬ್ಸಿಡಿ ಬ್ಯಾಂಕ್ ಖಾತೆಗಳ ಮೂಲಕ ವಿತರಿಸುವ ಯೋಜನೆ "ಪಹಲ್" ಜಾರಿಗೆ ಬಂತು. ಜೊತೆಯಲ್ಲೇ ಪ್ರಶ್ನೆಗಳು.


ಇಷ್ಟು ವರ್ಷ ಇಲ್ಲದ್ದು ಈಗೇಕೆ? ಹೇಗೂ ಕೊಡುತ್ತಿದ್ದಾರಲ್ಲ, ಮತ್ತೂ ಕೊಡುತ್ತಾರಲ್ಲ ಈ ಬ್ಯಾಂಕ್ ಖಾತೆ ಮೂಲಕ ಕೊಡುವ ಜಂಜಡವೇಕೆ? ಇದರಿಂದ ಸರ್ಕಾರಕ್ಕೆ ಏನು ಸಿಗುತ್ತೆ?
₹ ೨೦೭.೫೯ರಂತೆ ವರ್ಷಕ್ಕೆ ೯ ಸಿಲಿಂಡರ್‍ಗಳಿಗೆ ₹೧,೮೬೮.೩೧ ಆಗುತ್ತದೆ. ೧೬ ಕೋಟಿ ಸಂಪರ್ಕಗಳಿಗೂ ಕೊಟ್ಟರೆ ಸುಮಾರು ₹೨೯,೮೯೩ ಕೋಟಿ ಆಗುತ್ತದೆ. ಎಲ್ಲರೂ ಸಬ್ಸಿಡಿ ಬಳಸಿದರೆ ಸರ್ಕಾರಕ್ಕೆ ಉಳಿಯುವುದೇನೂ ಇಲ್ಲ. ಆದರೆ ಕನಿಷ್ಟ ೧ ಕೋಟಿ ಜನ ಸಬ್ಸಿಡಿ ಬೇಡ ಎಂದರೆ ಉಳಿಯುವ ಹಣ ₹ ೧,೮೬೮ ಕೋಟಿ. ಈ ೧೬ಕೋಟಿ ಸಂಪರ್ಕಗಳಲ್ಲಿ ೮ ಕೋಟಿಗಿಂತ ಹೆಚ್ಚು ಸಂಪರ್ಕಗಳು ನಗರ ಪ್ರದೇಶದಲ್ಲಿವೆ. ಇದರಲ್ಲಿ ಅರ್ಧದಷ್ಟು ಜನ ಸಬ್ಸಿಡಿ ಬಳಸದಿದ್ದರೆ ಉಳಿಯುವ ಹಣ ₹೭,೫೦೦ ಕೋಟಿ.

ಸಬ್ಸಿಡಿ ನಿರಾಕರಿಸಿ ಎಂದು ಬಿಜೆಪಿಯ ನರೇಂದ್ರ ಮೋದಿ ಏಕೆ ಹೇಳಬೇಕು?
ಅಡುಗೆ ಅನಿಲ ಸಬ್ಸಿಡಿ ನಿರಾಕರಿಸುವ ಜನರಿಂದ ಸಂಗ್ರಹವಾಗುವ ಹಣದಿಂದ ನೂರಾರು ಹಳ್ಳಿಗಳಲ್ಲಿರುವ ಹೊಗೆ ಸಹಿತ ಅಡುಗೆ ಮನೆಯನ್ನು ಹೊಗೆ ರಹಿತವಾಗಿ ಮಾಡುತ್ತೇನೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇದು ಅವರು ಪ್ರಧಾನಿಯಾಗಿ ಕೊಟ್ಟಿರುವ ಹೇಳಿಕೆ. ಬಿಜೆಪಿಯ ಮುಖವಾಣಿಯಾಗಿ ಅಲ್ಲ. ಈ ಹೇಳಿಕೆ/ಭರವಸೆಗಳನ್ನು ರಾಜಕೀಯ/ಪಕ್ಷಗಳ ದೃಷ್ಟಿಯಿಂದ ನೋಡಬಾರದು.

ಸಬ್ಸಿಡಿ ಯಾರು ನಿರಾಕರಿಸಬೇಕು?
ಸಂಸದರು, ಐಎಎಸ್‌, ಐಪಿಎಸ್‌, ಐಎಫ್ಎಸ್‌ನಂತಹ ಉನ್ನತ ದರ್ಜೆಯ ಅಧಿಕಾರಿಗಳು, ಶ್ರೀಮಂತ ವರ್ಗದ ಜನರು ಸಿಲಿಂಡರ್‌ ಸಬ್ಸಿಡಿ ಹಿಂತಿರುಗಿಸಿ, ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸುವ ಮನಸ್ಸಿದ್ದ ನಮ್ಮಂತವರೆಲ್ಲಾ ನಿರಾಕರಿಸಬಹುದು.

ಏನ್ ಮಹಾ ದೇಶ ಕಟ್ಟೋದು ಇವರು ನಮ್ಮ್ ದುಡ್ಡಿಂದ ?
ಯಾವುದೇ ಸರ್ಕಾರವಾದರೂ ಸ್ವರ್ಗವನ್ನೇ ಧರೆಗಿಳಿಸಲು ಸಾಧ್ಯವಿಲ್ಲ. ಸ್ವರ್ಗ / ರಾಮರಾಜ್ಯ ಸಾಕಾರವಾಗುವುದು ದೇಶದ ನಾಗರಿಕರು ಕೈಜೋಡಿಸಿದಾಗ ಮಾತ್ರ. ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿ ಅಥವಾ ಯಾವುದೇ ಮಹತ್ತರ ಬದಲಾವಣೆ ಸಾದ್ಯವಾಗಿದ್ದು ಜನರಿಂದ. ಸರ್ಕಾರ ಅದನ್ನು ನಿರ್ವಹಿಸುತ್ತದೆ ಅಷ್ಟೆ.


ಯಾಕೆ ನಗರದಲ್ಲಿ ಇರುವವರಿಗೇ ಹೇಳುತ್ತಿದ್ದೀರ ಸಬ್ಸಿಡಿ ಬಿಡೋಕೆ?
ನಗರದಲ್ಲಿರುವ ಜನಕ್ಕೆ ಸಬ್ಸಿಡಿ ಇಲ್ಲದೆಯೂ ಬದುಕುವ ಸಾಮರ್ಥ್ಯ ಖಂಡಿತ ಇದೆ. ಒಂದು ಮೊಬೈಲ್‍ನ ಇಂಟರ್‍ನೆಟ್‌ ಸಂಪರ್ಕ, ಡೇಟಾ ಮುಂತಾದವಕ್ಕೆ ತಿಂಗಳಿಗೆ  ₹೨೦೦ - ೩೦೦ ಖರ್ಚು ಮಾಡುವವರಿಗೆ ಸಬ್ಸಿಡಿ ದುಡ್ಡು ಯಾವ ಲೆಕ್ಕ? ಒಂದು ಸಲ ಸಂಸಾರಸಮೇತ ಹೊರಗೆ ಹೋಗಿ ತಿಂಡಿ ತಿಂದು ಚಲನಚಿತ್ರ ನೋಡಿದರೆ ಆಗುವ ಖರ್ಚು ವಾರ್ಷಿಕ ಸಬ್ಸಿಡಿಗಿಂತ ಹೆಚ್ಚು. ಇದಕ್ಕಿಂತಾ ಕಾರಣ ಬೇಕೆ? 

ಹಳ್ಳಿಯಲ್ಲಿರೋರು ಎಲ್ಲಾ ಬಡವರೇನಾ ? ಅವರೂ ಸಬ್ಸಿಡಿ ಬಿಡಲಿ.
ಹಳ್ಳಿಯಲ್ಲಿರುವವರು ಬಡವರಾ ಶ್ರೀಮಂತರಾ ಎಂಬ ಪ್ರಶ್ನೆಗಿಂತ ನಗರದ ಜನ ಅನುಭವಿಸುತ್ತಿರುವ ಎಷ್ಟು ಸೌಲಭ್ಯ ಸಿಕ್ಕಿದೆ ಎಂದು ಯೋಚಿಸಿ. ನಗರದ ರಸ್ತೆಗಳಿಗೂ ಹಳ್ಳಿ ರಸ್ತೆಗಳಿಗೂ ಹೋಲಿಸಲು ಸಾದ್ಯವೇ? ನಗರಲ್ಲಿರುವ ಸಾರಿಗೆ ವ್ಯವಸ್ಥೆಗೂ ಗ್ರಾಮಾಂತರ ಸಾರಿಗೆಗೂ ಹೋಲಿಕೆ ಸಮಂಜಸವೇ? ಅವರಿಗೂ ನಗರ ಪ್ರದೇಶದಲ್ಲಿರುವ ಎಲ್ಲಾ ಸವಲತ್ತುಗಳನ್ನೂ ಕೊಟ್ಟು ಆಮೇಲೆ ಸಬ್ಸಿಡಿ ಬಿಡಿ ಎಂದು ಕೇಳೋಣ. ಸ್ವಲ್ಪ ನಿಧಾನಿಸಿ.

ಮತ್ತೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಅರ್ಧದಷ್ಟು ಸಂಪರ್ಕಗಳು ನಗರ ಪ್ರದೇಶದಲ್ಲಿವೆ. ನಗರ ಪ್ರದೇಶದಲ್ಲಿರುವ ಮೂರು ಪಟ್ಟು ಜನ ಹಳ್ಳಿಗಳಲ್ಲಿದ್ದಾರೆ. ಆದರೆ ನಗರ ಪ್ರದೇಶದಲ್ಲಿರುವಷ್ಟು ಸಂಪರ್ಕಗಳೇ ಹಳ್ಳಿಗಳಲ್ಲಿ ಇವೆ. ಅಡುಗೆ ಅನಿಲ ಸಂಪರ್ಕಗಳೇ ಆ ಮಟ್ಟಕ್ಕೆ ಅಲ್ಲಿ ವ್ಯಾಪಿಸಿಲ್ಲ. ಯಾವ ಆಧಾರದ ಮೇಲೆ ಅವರನ್ನು ಸಬ್ಸಿಡಿ ಬಿಡಿ ಎಂದು ಕೇಳುವುದು?

ಈವರೆಗೂ ಎಷ್ಟು ಜನ ಸಬ್ಸಿಡಿ ಬಿಟ್ಟಿದ್ದಾರೆ?
(ಏಪ್ರಿಲ್ ೫ರಂದು ಇದ್ದಂತೆ) ಭಾರತ್ ಗ್ಯಾಸ್ - ೩೯೦೨೬, ಹೆಚ್‍ಪಿ  - ೮೭೮೭೬ ಮತ್ತು ಇಂಡೇನ್ - ೧,೯೭,೦೦೦  ಜನ ಈಗಾಗಲೇ ಸಬ್ಸಿಡಿ ಬೇಡವೆಂದು ಘೋಷಿಸಿದ್ದಾರೆ. ಸುಮಾರು ೬೦ಕೋಟಿಗಿಂತ ಹೆಚ್ಚು ಹಣ ಸರ್ಕಾರಕ್ಕೆ ಉಳಿಯುತ್ತದೆ. ಜನಜಾಗೃತಿ ಸಾಲದು. ಅದು ನಮ್ಮಿಂದಲೇ ಆಗಲಿ. 

ಇಷ್ಟೆಲ್ಲಾ ಹೇಳ್ತಿದೀಯಾ, ನೀನು ಬಿಟ್ಟಿದ್ದೀಯಾ ?
ಹೇಳಿದವನೇ ಪಾಲಿಸದಿದ್ದರೆ ಅವನ ಹೇಳಿಕೆಗೆ ನೈತಿಕತೆ ಎಲ್ಲಿ ? ಲಾಲ್ ಬಹದ್ದೂರರು ದೇಶದ ಜನಕ್ಕೆ ಒಂದು ಹೊತ್ತಿನ ಉಪವಾಸಕ್ಕೆ ಕರೆ ಕೊಟ್ಟಿದ್ದಾಗ ಅವರೂ ಅದನ್ನು ಪಾಲಿಸುತ್ತಿದ್ದರು. ಅವರೊಡನೆ ನಾನು ಹೋಲಿಸಿಕೊಳ್ಳುತ್ತಿಲ್ಲ. ನೈತಿಕತೆ ಎಂದರೇನು ಎಂಬುದರ ಬಗ್ಗೆ ಹೇಳಿದೆ ಅಷ್ಟೆ.

ಎಷ್ಟು ಜನ ತಿರಸ್ಕರಿಸಿದ್ದಾರೆ ಎನ್ನುವ ಮಾಹಿತಿಗಳು ಬೇಕಾದರೆ ಇಲ್ಲಿವೆ ನೋಡಿ.


ಸರೀ, ಸರಿ. ಈಗ ಸಬ್ಸಿಡಿ ಬಿಡೋದು ಹೇಗೆ ?
೧. ಸಬ್ಸಿಡಿ ಬೇಡವೆಂದು ಹೇಳುವ ಗ್ರಾಹಕರು ಮೊದಲು http://www.givitup.in/ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಲ್ಲಿ ಭಾರತ್ ಗ್ಯಾಸ್, ಎಚ್‌ಪಿ, ಇಂಡಿಯನ್ ಗ್ಯಾಸ್ ಕಂಪನಿಗಳ ಮಾಹಿತಿ ನೀಡಲಾಗಿದೆ. ವೆಬ್‌ಸೈಟ್‌ಗೆ ಭೇಟಿ ನೀಡಿದ ಗ್ರಾಹಕರು ತಮ್ಮ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಗ್ಯಾಸ್ ನಂಬರ್‌ ಅನ್ನು ದಾಖಲು ಮಾಡಬೇಕು.


೨. ಎಸ್‌ಎಂಎಸ್ ಮಾಡುವ ಮೂಲಕವೂ ಜನರು ಸಬ್ಸಿಡಿಯನ್ನು ತಿರಸ್ಕಾರ ಮಾಡಬಹುದು. ಭಾರತ್ ಗ್ಯಾಸ್ ಸಂಪರ್ಕ ಹೊಂದಿರುವವರು GIVEITUP ಎಂದು 7738299899. ಎಚ್‌ಪಿ ಗ್ಯಾಸ್‌ನವರು GIVEITUP ಎಂದು 9766899899. ಇಂಡಿಯನ್ ಗ್ಯಾಸ್‌ನವರು GIVEITUP ಎಂದು 8130792899 ನಂಬರ್‌ಗೆ ನಿಮ್ಮ ನೋಂದಾಯಿತ ಸಂಖ್ಯೆಯಿಂದ ಎಸ್‌ಎಂಎಸ್ ಕಳಿಸಬಹುದು.

೩. ಎಸ್‌ಎಂಎಸ್ ಆನ್‌ಲೈನ್ ಸೇವೆ ಬೇಡ ಎನ್ನುವುದಾದರೆ ನಿಮ್ಮ ಸಿಲಿಂಡರ್ ವಿತರಕರನ್ನು ಭೇಟಿ ಮಾಡಿ ಅರ್ಜಿ ಪಡೆದು ಭರ್ತಿ ಮಾಡಿ ನೀಡಬಹುದು. ಅರ್ಜಿಯಲ್ಲಿ 17 ಸಂಖ್ಯೆಗಳ ನಿಮ್ಮ ಸಿಲಿಂಡರ್ ಸಂಪರ್ಕದ ನಂಬರ್ ಮತ್ತು ಒಂದು ಸಹಿ ಹಾಕಿದರೆ ಸಾಕಾಗುತ್ತದೆ. 

ಸಬ್ಸಿಡಿ ತಿರಸ್ಕರಿಸುವ ಬಗ್ಗೆ ಗೊಂದಲಗಳಿದ್ದರೆ 18002333555 ದೂರವಾಣಿ ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.

ಸಣ್ಣ ಸಣ್ಣದಕ್ಕೂ ತೆರಿಗೆ ಕಟ್ಟುವ ನಾವು ಈ ಪುಟ್ಟ ಸವಲತ್ತನ್ನು ತಿರಸ್ಕರಿಸುವ ಅಗತ್ಯವಿದೆಯೆ? ಸೇವೆಗಾಗಿಯೇ ನಿಂತವರು ಇವನ್ನೆಲ್ಲಾ ತಿರಸ್ಕರಿಸಿಲ್ಲ. 
ಕೆಲವು ಸಚಿವರು ಸಂಸದರು ಈಗಾಗಲೇ ತಿರಸ್ಕರಿಸಿದ್ದಾರೆ. ಸೇವೆಗಾಗಿಯೇ ನಿಂತಿರುವ ಮಂದಿಗಿಂತ ಪ್ರಜೆಗಳೇ ಬಹುಸಂಖ್ಯಾತರು ಅಲ್ಲವೇ? ಕಳೆದ ೩ ದಿನಗಳಲ್ಲಿ ಕರ್ನಾಟಕದಲ್ಲಿ ೨೦ ಸಹಸ್ರ ಮಂದಿ ಸಬ್ಸಿಡಿ ತಿರಸ್ಕರಿಸಿದ್ದಾರೆ ಎಂಬ ಸುದ್ದಿಯೂ ಇದೆ. ಹನಿಹನಿಗೂಡಿದರೆ ಹಳ್ಳ. ವಿವೇಚನೆಯಿಂದ ಯೋಚಿಸಿ, ಯಾವ ಗುಂಪಿನಲ್ಲಿ ಸೇರಿಕೊಳ್ಳಬೇಕು ಎಂಬುದನ್ನು ನಿರ್ದರಿಸಿ. 

(ಕುಹುಕ ಪ್ರಶ್ನೆ) ಹೂಂ.. ನಾವೇನೋ ಸಬ್ಸಿಡಿ ಬೇಡ ಅಂತ ಅಂದ್ಬಿಟ್ಟು ಬಿಡ್ತೀವಿ. ಆದರೆ ಅದನ್ನೆಲ್ಲಾ ರಾಜಕೀಯದವರೇ ತಿಂದುಕೊಳ್ತಾರೆ?
ಸರಿ, ರಾಜಕೀಯದವರು ತಿನ್ನಲು ನೀವೇ ಏನಾದರೂ ನೇರವಾಗಿ ಅವರ ಕೈಗೆ ಕೊಡುತ್ತಿದ್ದೀರಾ? ಮತ ಹಾಕಲು ನೀವುಗಳೇ ದುಡ್ಡು ತೆಗೆದುಕೊಳ್ಳುವಾಗ ಹೇಳಿದ ಮಾತು 'ನಮ್ಮ ದುಡ್ಡು ನಮಗೇ ಕೊಡ್ತಾವ್ರೆ' ಎಂದಿದ್ದಿರಿ, ಅದು ಮರೆತು ಹೋಯ್ತೇ?

ಬನ್ನಿ ಕೈಜೋಡಿಸೋಣ

ಉಲ್ಲೇಖಗಳಲ್ಲಿರುವ ದಾಖಲೆಗಳನ್ನೂ ಓದಿ. ಹೆಚ್ಚಿನ ಪ್ರಶ್ನೆಗಳಿದ್ದರೆ ದಯವಿಟ್ಟು ಕಮೆಂಟ್ ಮಾಡಿ. ಉತ್ತರವನ್ನು ಕೊಡುವ ಪ್ರಯತ್ನ ಮಾಡೋಣ. ಸಬ್ಸಿಡಿ ನಿರಾಕರಿಸುವುದನ್ನೂ ಒಂದು ನಾಗರಿಕ ಕರ್ತವ್ಯ ಎಂದು ನನ್ನೊಡನೆ ಕೈಜೋಡಿಸುತ್ತೀರೆಂಬ ವಿಶ್ವಾಸದೊಂದಿಗೆ
- ಹರ್ಷ ದೇವನಹಳ್ಳಿ


ಉಲ್ಲೇಖಗಳು:
1. ಪಹಲ್  2. ಮಾಹಿತಿ ಖಾತೆ  3. 2010ರಲ್ಲಿ ನಡೆದಿದ್ದ ಮೇಳದಲ್ಲಿ ಪ್ರಸ್ತುತಪಡಿಸಿದ ದಾಖಲೆ 4. ಮಾರ್ಚ್ ೨೦೧೪, IISD ದಾಖಲೆ

Saturday, April 4, 2015

ಗ್ರಹಣ ವಿಮೋಚನೆ

ಚಂದ್ರಗ್ರಹಣ ವಿಮೋಚನೆಯಾಯಿತು. 
ಆದರೆ ಪ್ರತಿದಿನ ಮಾನಸಿಕ (ಕೆಲವೊಮ್ಮೆ ದೈಹಿಕ) ಹಿಂಸೆ ಅನುಭವಿಸುತ್ತಿರುವ 'ಅವನಿ'ಗೆ ಚಂದ್ರಕುಮಾರನಿಂದ ಬಿಡುಗಡೆ ಸಿಕ್ಕಿಲ್ಲ ಇಂದೂ ಕೂಡ. ನ್ಯಾಯಾಧೀಶರು ಅವರ ಮೊಕದ್ದಮೆಯನ್ನು ಮುಂದಿನ ಗ್ರಹಣದ ದಿನಕ್ಕೆ ಹಾಕಿದ್ದಾರೆ.
.
.
.
ಅವನಿ = ಭೂಮಿ.
ಭೂಮಿಬಗೆಯುವ ಗಣಿಗಾರಿಕೆ, ಎಲ್ಲೆಲ್ಲೂ ನೀರಿಗಾಗಿ ಗುಂಡಿ ತೋಡುವ ಗುಣಿಗಾರಿಕೆ, ನಮ್ಮ ಜನರಿಗೆ ಉಪಯುಕ್ತವಾಗದ ಕೈಗಾರಿಕೆ... ಮುಂತಾದವುಗಳಿಂದ ಭೂಮಿಗೆ ಮುಕ್ತಿ ಸಿಕ್ಕಾಗ ಮಾತ್ರ ಭೂಮಿಯ ಗ್ರಹಣಮೋಕ್ಷ.