Wednesday, December 31, 2014

ಗೋವಿನ ಹಾಡು-ಪಾಡು

ಗೋವಿನ ಹಾಡು ಎನ್ನುತ್ತಿರುವಂತೆ ಹಳೆಯ ಹಾಡು ನೆನಪಾಯಿತೇ, ಇಲ್ಲ ಇವತ್ತು ಆ ಹಾಡನ್ನು ಹಾಡುವ ಸ್ಥಿತಿಯಲ್ಲಿಲ್ಲ. ಮತ್ತದೇ ಹಾಡನ್ನು ಎಷ್ಟು ಸಲ ಕೇಳುತ್ತೀರಿ? ಇಂದು ನಾ ಹಾಡುವುದು ನನ್ನ ಪಾಡಿನ ಹಾಡು. "ನೀನಾರಿಗಾದೆಯೋ ಎಲೆ ಮಾನವ" ಎಂದು ಯಾವಾಗಲೋ ಕೇಳಿದ್ದೆ. ಆದರೂ ನರಮಾನವರಿಗೆ ಅರ್ಥವಾಗಲಿಲ್ಲ. ಅದಕ್ಕೆ ಈ ಬಾರಿ ನನ್ನ ನಿಟ್ಟುಸಿರಿನ ಪಾಡು ನಾನೇ ಹೇಳುತ್ತಿದ್ದೇನೆ. 
ನನ್ನ ವೈರಿಯೆಂದೇ ಎಂದುಕೊಂಡಿದ್ದ ಹುಲಿಯನ್ನು ನರಭಕ್ಷಕ ಹುಲಿ ಎಂಬ ಪಟ್ಟ ಕಟ್ಟಿ ನರಮಾನವರು ಕೊಂದರು. ಬಲಿಷ್ಟ ಹುಲಿಯನ್ನೇ ಕೊಂದವರಿಗೆ ನಾನು ಯಾವ ಲೆಕ್ಕ? ವಿಷಯ ಅದಲ್ಲ, ನರಮಾನವರು ನಮಗೆ ಕೊಡುತ್ತಿರುವ ಗೌರವಾದರ(!)ಗಳನ್ನು ಹೇಳಬೇಕೆಂದಿದ್ದೇನೆ. ಗೋವುಗಳನ್ನು ಸಂಪತ್ತು ಎಂದೆಣಿಸುವ ಕಾಲ ಯಾವಗಲೋ ಮುಗಿದಿದೆ. ಈಗ ನಾವು ಬರೀ ಬದುಕಬೇಕು ಅಷ್ಟೆ. ಬದುಕುವುದಕ್ಕೂ ಎಷ್ಟೊಂದು ಅಡೆತಡೆ.


ಇಂದು ರಾಜೇಶ್ ಶ್ರೀವತ್ಸರು ಬರೆದಿದ್ದರು ಕಾಜಾಣದಲ್ಲಿ:

"ಬೆಂಗಳೂರು ನಗರದ ಕೊಳಕಿನ ಬಗ್ಗೆ ಎಷ್ಟೋ ಜನ ಎಷ್ಟೋ ಬರೆದಾಯಿತು, ನಾವೆಲ್ಲಾ ಓದಿದ್ದಾಯ್ತು. ನಾನು ಹಿಂದೊಮ್ಮೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ತೋಗೂರು ಕೆರೆಯ ಬಗ್ಗೆ ಬರೆದಿದ್ದೆ. ಆ ಕೊಳಕಿಗೆ ಹೆದರಿ ಮತ್ತೆ ಅತ್ತ ತಲೆ ಹಾಕಿರಲಿಲ್ಲ. ಇವತ್ತು ಮದ್ಯಾಹ್ನ ಕೆಲಸದ ಮೇಲೆ ಗ್ರಾಮ ಪಂಚಾಯ್ತಿಗೆ ಹೋಗಬೇಕಿತ್ತು. ಒಳ್ಳೆಯ ರಸ್ತೆಯಲ್ಲಿ ಹೋದರೆ 30 ನಿಮಿಷ, ಈ ದಾರಿಯಲ್ಲಿ ಹೋದರೆ 5 ನಿಮಿಷ ಎಂದು ಗಟ್ಟಿ ಮನಸು ಮಾಡಿ ಕೆರೆ ದಂಡೆಯಲ್ಲಿ ನಡೆದು ಹೊರಟೆ. ಏನೂ ಬದಲಾಗಿರಲಿಲ್ಲ ಅಥವಾ ಇನ್ನೂ ಹದಗೆಟ್ಟಿತ್ತು.  ನನ್ನ ಹಿಂದೆ ಯಾವುದೋ ಹೋಟೆಲ್‌ನ ಕಸ ಹೊತ್ತ ಗಾಡಿ ಧೂಳೆಬ್ಬಿಸುತ್ತಾ ಬಂದು ರಸ್ತೆ ಬದಿಯ ಪಕ್ಕ ಧೊಪ್ಪೆಂದು ಒಂದಷ್ಟು ಕಸ ಎಸೆದು ಮುಂದೆ ಸಾಗಿತು. ನನ್ನ ಕೆಲಸ ಮುಗಿಸಿ ಅದೇ ದಾರಿಯಲ್ಲಿ ಬಂದೆ. ಹೋಟೆಲ್ ಗಾಡಿ ಕಸ ಎಸೆದ ಜಾಗದಲ್ಲಿ ಎರಡು ದನಗಳು ಮೇಯುತ್ತಾ ನಿಂತಿದ್ದವು. ಮನಸ್ಸು (ಮೂಗು) ಬೇಡ ಬೇಡವೆಂದರೂ ಅರೆನಿಮಿಷ ಅಲ್ಲೇ ನಿಂತು ಹೋಟೆಲ್ ಕಸ ಮೇಯುತ್ತಿರುವ ದನಗಳ ಚಿತ್ರ ತೆಗೆದೆ. ಕೆಟ್ಟ ಕುತೂಹಲದಿಂದ ಎರಡು ಹೆಜ್ಜೆ ಮುಂದೆ ಹಾಕಿ ಅದೇನೆಂದು ನೋಡಿದರೆ.... ಆ ಪ್ಲಾಸ್ಟಿಕ್ ಚೀಲದ ತುಂಬಾ ಹಳಸಿದ ಬಿರಿಯಾನಿ, ಅನ್ನದ ಜೊತೆ ಮಾಂಸ ಮೂಳೆಯ ತುಂಡುಗಳು. ಹಸು ಅದನ್ನೇ ಅರಿವಿಲ್ಲದೆ ತಿನ್ನುತ್ತಾ ಇದ್ದದ್ದನ್ನು ನೋಡಿದ ಮೇಲೆ ಯಾಕೋ ದುಃಖ, ಜಿಗುಪ್ಸೆ ಆವರಿಸಿ ಮನಕೆ ಮಂಕು ಕವಿದಿದೆ."

ನಾನಷ್ಟೆ ಅಲ್ಲ, ಯಾವ ನಮ್ಮ ಬಂಧು ಬಳಗದವರೂ ಮೂಳೆಗಳನ್ನು ತಿನ್ನುವುದಿಲ್ಲ, ತಿನ್ನಲಾಗದು. ಅದು ಬಿಡಿ. ಹಸಿರಿಲ್ಲದ ಈ ಕಾಲದಲ್ಲಿ ನನಗೆ ಪ್ಲಾಸ್ಟಿಕ್ ಕಸವೇ ಗತಿ.  ಈ ನನ್ನ ಸ್ಥಿತಿಗೆ ಕಾರಣೀಭೂತರ ಬಗ್ಗೆ ಹೇಳುತ್ತೇನೆ

1. ನನ್ನ ಒಡೆಯ:
ಒಡೆಯನನ್ನೇ ದೂರಿದ ಅಪಮಾನ ಒದಗಿದರೂ ನಾನಿದನ್ನು ಹೇಳಲೇಬೇಕು. ಗೊಡ್ಡು ದನವಾದರೆ ನಮಗೆ ನೆಲೆಯಿಲ್ಲ. ಕಾಮಧೇನುವಿನಂತಹ ಹಸುವಾದರೂ ನಮಗೆ ಸರಿಯಾದ ಆಹಾರವಿಲ್ಲ. ಆಹಾರವಿಲ್ಲದಿದ್ದರೂ ನಾವು ಹಾಲು ಕೊಡಲೇಬೇಕು, ಇಲ್ಲದಿದ್ದರೆ ನಮಗೆ ಸಿಗುವ ಅಲ್ಪ ಆಹಾರವೂ ನಾಸ್ತಿ, ಗೊಡ್ಡು ದನದ ಪಟ್ಟ ಕಟ್ಟಿಟ್ಟ ಬುತ್ತಿ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿ ನಮಗಲ್ಲ, ಜಡ್ಡು ಜಾಪತ್ರೆಗಳಿಗೆ ಸರಿಯಾದ ಆರೈಕೆಗಳಿಲ್ಲ. ಎಲ್ಲದಕ್ಕೂ ಮುಖ್ಯವಾಗಿ ನಾವು ಈಗ ಒಂಟಿ ಸ್ವಾಮಿ. ಹೋರಾಟದ ಹಾದಿ ನಮಗೆ ತಿಳಿದಿಲ್ಲ, ಹೋರಾಡಬೇಕೆಂದರೂ ಜೊತೆಗಾರರಿಲ್ಲ. ಮೊನ್ನೆ ಘಾಟಿ ಜಾತ್ರೆಯಲ್ಲಿ ನನ್ನನ್ನೂ ಮಾರಲು ಹೋಗಿದ್ದರು, ನಾನು ಸ್ವಲ್ಪ ಗಲಾಟೆ ಮಾಡಿದ್ದಕ್ಕೆ ನನ್ನನ್ನು ಯಾರೂ ಕೊಳ್ಳಲಿಲ್ಲ. ಎಲ್ಲಾ ಮನುಷ್ಯರೂ ಒಂದೇ ಅನಿಸುತ್ತೆ. ಕಾಣದ ದೈವಕ್ಕಿಂತ ಕಂಡಿರುವ ದೆವ್ವವೇ ಒಳ್ಳೆಯದೆಂದು ಈ ಒಡೆಯನೊಂದಿಗೇ ದಿನ ಕಳೆಯುತ್ತಿದ್ದೇನೆ. ಆಹಾರ ಸಾಲುವುದಿಲ್ಲ ಎಂದು ಕಂಡ ಕಂಡಲ್ಲಿ ನುಗ್ಗಲು ನಾವೇನು ಬೀದಿ ನಾಯಿಗಳೇ? ಹಾಗೂ ನುಗ್ಗಿದರೆ ನನ್ನ ಒಡೆಯನ ಮೇಲೆ ದೂರು ಕೊಡುತ್ತಾರೆ. ಮೇಯಲು ಜಾಗವೆಲ್ಲಿ ಸ್ವಾಮಿ? ಆಹಾರವೂ ಇಲ್ಲ, ಮೇಯಲು ಜಾಗ ನಿಗದಿಯಾಗಿಲ್ಲ, ಮೇಯಲು ಹಸುರಿಲ್ಲ. ನಾನು ಬದುಕುವುದಾದರೂ ಹೇಗೆ?

2. ಆಡಳಿತ ವ್ಯವಸ್ಥೆ
ವ್ಯವಸ್ಥೆಯನ್ನು ದೂರುವಷ್ಟು ದೊಡ್ಡವರಲ್ಲ ನಾವು, ಆದರೆ ಇದು ಈಗ ಅನಿವಾರ್ಯ. ನೈರ್ಮಲ್ಯದ ಪಾಠ ಮನುಷ್ಯರಿಗೆ ಪ್ರಧಾನ ಮಂತ್ರಿ ಕಡೆಯಿಂದ ಬರುತ್ತದೆ, ಆದರೂ ಅದು ಸರಿಯಾಗಿ ಕಾರ್ಯನಿರ್ವಹಣೆ ಆಗುವುದಿಲ್ಲ ಎಂದರೆ ಅದು ಆಡಳಿತದ ದುರ್ವ್ಯವಸ್ಥೆ. ಕಸ ಸಂಗ್ರಹಣೆ ನಡೆದರೂ ಅದರ ನಿರ್ವಹಣೆ ಇಲ್ಲ, ದಾರಿಯಲ್ಲಿ ಕಸ ಚೆಲ್ಲಿಕೊಂಡು ಹೋಗುವುದು ಸಹ ಕಸ ವಿಲೇವಾರಿಯ ಒಂದು ಮಾರ್ಗ. ಕಸ ವಿಲೇವಾರಿ ಜಾಗಕ್ಕೇ ಗಲಾಟೆಗಳು. ಬೆಂಗಳೂರಿನ ಕಸವನ್ನು ಮಂಡೂರು, ದೊಡ್ಡಬಳ್ಳಾಪುರದ ಆರೂಡಿ ಹೀಗೆ ಎಲ್ಲೆಲ್ಲೋ ವಿಲೇವಾರಿ ಮಾಡಬೇಕಾದ ಅನಿವಾರ್ಯತೆ. ಕಸ ನಿರ್ವಹಣೆಗೆ ಸರಿಯಾದ ಮಾರ್ಗಸೂಚಿಗಳು ಇದ್ದರೂ ಅವು ಕಾರ್ಯನಿರ್ವಹಿಸುವುದಿಲ್ಲ. ನಗರ ಪಾಲಿಕೆಗಳು, ಪುರಸಭೆ ನಗರ ಸಭೆಗಳಿಗೆ ಕಸ ವಿಲೇವಾರಿ, ನಿರ್ವಹಣೆಗಳಿಗೆ ರಾಜಕೀಯದ ಮಧ್ಯೆ ಬಿಡುವಿಲ್ಲ. ಹೀಗಿರುವಾಗ ನಮ್ಮಂಥ ಯಕಃಶ್ಚಿತ್ ಪ್ರಾಣಿಗಳಿಗೆ ಉಚಿತವಾಗಿ ಸಿಗುವುದು ಕಸ ಮತ್ತು ಹೊಡೆತ ಮಾತ್ರ. ಇದು ಬರೀ ನನ್ನ ಸಮಸ್ಯೆಯಲ್ಲ, ಎಲ್ಲಾ ಪ್ರಾಣಿಗಳದ್ದೂ, ನರಮಾನವರದ್ದೂ ಸೇರಿ. 

3. ಪರಿಸರ ಸಂಘಟನೆಗಳು
ನೀವು - ನಾವು ಜೀವಿಸುತ್ತಿರುವ / ಜೀವಿಸದಿರುವ ಎಲ್ಲ ಭೂಭಾಗಗಳು, ಸಕಲ ಜೀವಿಗಳು ಸೇರಿ ಪರಿಸರ. ನಾವು ಪರಿಸರದ ಭಾಗವಲ್ಲವೇ? ನಮ್ಮ ಆಹಾರವನ್ನು ನರಮಾನವರು ಕಿತ್ತುಕೊಂಡಿಲ್ಲವೇ? ನಮಗೆ ಮೇಯಲು ಎಲ್ಲಿದೆ ಹಸಿರು? ಪರಿಸರ ಎಂದರೆ ಬರೀ ನದಿ, ಕೆರೆ, ಕೊಳ, ಅರಣ್ಯಗಳಲ್ಲ ಸ್ವಾಮಿ. ಪರಿಸರ ಸಂಘಟನೆಗಳೆಂಬ ಹೆಸರಿನ ವ್ಯಾಪ್ತಿಗೆ ತಕ್ಕಂತೆ ಕೆಲಸ ಮಾಡುವಿರೆಂದು ನಂಬುವುದು ತಪ್ಪೇ?

4. ಪ್ರಾಣಿ ದಯಾ ಸಂಘಗಳು
ಯಾವ ಪ್ರಾಣಿಗೆ ತೊಂದರೆಯಾದರೂ ಪ್ರಾಣಿ ದಯಾ ಸಂಘಗಳು ಬರುತ್ತವೆಯಂತೆ. ನಾನಂತೂ ಕಂಡಿಲ್ಲ. ಎಲ್ಲವೂ ಬರೀ ತೋರಿಕೆಯೆಂದೇ ಎನಿಸುತ್ತದೆ ನನಗೆ. ದೂರು ಕೊಟ್ಟರೆ ಅಥವಾ ಸುದ್ದಿಯಾದರೆ ಮಾತ್ರ ಬರುವ ಅವರು ಒಳ್ಳೆಯ ಕೆಲಸವನ್ನೇ ಮಾಡುತ್ತಿರಬಹುದು, ಆದರೆ ನಮ್ಮ ಈ ಸ್ಥಿತಿಯನ್ನು ದೂರು ಕೊಡುವವರಾರು? ದೂರು ಕೊಟ್ಟರೆ ಆಗುವುದು ಪ್ರಾಣಿಗಳಿಗೆ ಚಿಕಿತ್ಸೆಯೇ ಹೊರತು ವ್ಯವಸ್ಥೆಯ ಬದಲಾವಣೆಯಲ್ಲ. 

ದೂರಂತೂ ದೂರದ ಮಾತು, ಅದಕ್ಕೇ ನಾನೇ ಸುದ್ದಿಯಾಗಬೇಕೆಂದು ಹೇಳುತ್ತಿದ್ದೇನೆ. ಸ್ವಯಂಪ್ರೇರಣೆಯಿಂದ ಸಂಘಟನೆಯ ವಿಭಾಗಗಳು ಕೆಲವು ಸ್ಥಳಗಳನ್ನು ಗುರುತಿಸಿಕೊಂಡು ಅಲ್ಲಿನ ಪ್ರಾಣಿಗಳನ್ನು ಗಮನಿಸಿದರಲ್ಲವೇ ಆ ಸಂಘಟನೆಗಳಿಗೆ ಒಂದು ಅರ್ಥ ಬರುವುದು? 

ನನ್ನ ಪಾಡನ್ನು ಹೇಳಿದ್ದೇನೆ. ಕಾಯುವಿರೋ ಕೊಲ್ಲುವಿರೋ ನಿಮಗೇ ಬಿಟ್ಟಿದ್ದು.

Wednesday, December 17, 2014

Tuesday, December 16, 2014

ಚುಟುಕು ರಾಮಾಯಣ


ಕಥೆಯಷ್ಟೇ ಕಥಾ ವಿಸ್ತಾರವೂ ಮುಖ್ಯ. ಅದಕ್ಕೆ ಉದಾಹರಣೆ ಈ ಚುಟುಕು ರಾಮಾಯಣ

ರಾಮನ ಜನನ
ಸೀತೆಯೊಡನೆ ಮಿಲನ
ಸೀತಾಪಹರಣ
ಲಂಕಾ ದಹನ
ರಾವಣ ಮರಣ
ಸೀತಾರಾಮರ ಪುನರ್ಮಿಲನ.


ಚಿಕ್ಕಂದಿನಲ್ಲಿ ಕೇಳಿದ್ದಿದ್ದು (ತೆಲುಗಿನಲ್ಲಿ) : ರಾಮ ಪುಟ್ಟೆ, ರಾವಣನ್ನ ಕೊಟ್ಟೆ, ಸೀತಮ್ಮನ ತೆಚ್ಚೆ; ಇಂತೆ ರಾಮಾಯಣಮು !

Sunday, December 7, 2014

ಕಲಾಚೇತನ - 2014 ( ನವೆಂಬರ್ 30)

ಹಿಂದೂ ಸೇವಾ ಪ್ರತಿಷ್ಟಾನದ ಭಾಗವಾದ ವಿದ್ಯಾಚೇತನ 2009ರಲ್ಲಿ ಪ್ರಾರಂಭವಾಗಿ ಈವರೆಗೆ 2000ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದೆ. (ಪ್ರಾಥಮಿಕ/ಹಿರಿಯ ಪ್ರಾಥಮಿಕ/ ಪ್ರೌಢ) ಶಾಲೆಗಳ ಮಕ್ಕಳಿಗೆ ವಿದ್ಯೆ ಎಂಬುದು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಬಾರದು. ಚಿಗುರುಮನಸುಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ನೀಡುವ ಉದ್ದೇಶದಿಂದ ಆಯೋಜನೆಗೊಂಡ ಕಾರ್ಯಕ್ರಮ ಕಲಾಚೇತನ. 16 ಸೇವಾಕೇಂದ್ರಗಳ 200ಕ್ಕೂ ಹೆಚ್ಚು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿತ್ತು ಈ ವರ್ಷದ ಕಲಾಚೇತನ. 2014ರ ಕಲಾಚೇತನ ನಡೆದದ್ದು ಬನಶಂಕರಿಯಲ್ಲಿರುವ Our School ಶಾಲೆಯಲ್ಲಿ. ಅಲ್ಲಿ ನಡೆದ ಅನೇಕ ಕಾರ್ಯಕ್ರಮಗಳ ಸಣ್ಣ ಝಲಕ್ ಈ ಬರಹ. 


ರಂಗೋಲಿ:
ರಂಗೋಲಿ ನಮ್ಮ ಸಂಸ್ಕೃತಿಯ ಒಂದು ಭಾಗ. ಹಿಂದೂಗಳ ಮನೆಯ ಮುಂದೆ ರಂಗೋಲಿ ಇಲ್ಲದಿದ್ದರೆ ಅದು ಅಚ್ಚರಿಯಷ್ಟೆ. ಮನೆಯ ಮುಂದೆ ಬಿಡಿಸಿರುವ ರಂಗೋಲಿ ಮಕ್ಕಳು ನೋಡಿಯೇ ಬೆಳೆಯುತ್ತಾರೆ. ಆ ರಂಗೋಲಿಗಳಿಗೇ ಇಲ್ಲಿ ಸ್ಪರ್ಧೆ. ಪ್ರತೀ ಸೇವಾಕೇಂದ್ರದಿಂದಲೂ ರಂಗೋಲಿ ಸ್ಪರ್ಧೆಗೆ ಮಕ್ಕಳು ಇದ್ದದ್ದು ವಿಶೇಷ. 


ಚಿತ್ರಕಲೆ:
ಬಣ್ಣಗಳಲ್ಲೇ ಆಟವಾಡಬಲ್ಲ ಪ್ರತಿಭೆಗಳಿಗೆ ವೇದಿಕೆ ಚಿತ್ರಕಲೆ ಸ್ಪರ್ಧೆ. A3 ಹಾಳೆಯ ಜಾಗದಲ್ಲೇ ಬಗೆಬಗೆಯ ಚಿತ್ರ ಬಿಡಿಸಿ ಜನರನ್ನು ಮೋಡಿ ಮಾಡಿದರು.

ಚರ್ಚಾ ಸ್ಪರ್ಧೆ:
ಓದಿದವನು ಜ್ಞಾನಿಯಾಗುವನು, ಚರ್ಚಾಕೂಟದಲ್ಲಿ ಭಾಗವಹಿಸುವವನು ಸರ್ವಸಮ್ಮತ ಮಾನವನಾಗುವನು, ಬರೆಯುವ ರೂಢಿ ಇರುವವನು ದೋಷವಿಲ್ಲದ ಪಂಡಿತನೆನೆಸಿಕೊಳ್ಳುವನು. (Reading maketh a full man, conference a ready man, and writing an exact man. - Sir Francis Bacon (1561 - 1626)) ಚರ್ಚಾಸ್ಪರ್ಧೆ ಭಾಷಣಕಾರರಾಗಬಲ್ಲ ಪ್ರತಿಭೆಗಳಿಗೆ ಒಂದು ವೇದಿಕೆ. "ದೂರದರ್ಶನ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕ" ಎಂಬ ವಿಷಯದ ಬಗ್ಗೆ ಏಳರಿಂದ ಹತ್ತನೇ ತರಗತಿಯ ೧೮ ಪ್ರತಿಭೆಗಳು ವಾದವನ್ನು ಮಂಡಿಸಿದರು. ಪ್ರತಿಭೆಗಳ ಆತ್ಮವಿಶ್ವಾಸ, ಮಾತಿನ ವೈಖರಿ, ವಿಷಯದ ವಿಸ್ತಾರ, ಸಮಯದ ಬಳಕೆ ಮುಂತಾದ ಅಂಶಗಳಿಂದ ಮೌಲ್ಯಮಾಪನ ನಡೆಯಿತು. 


(ಧರ್ಮ) ರಸಪ್ರಶ್ನೆ:
ಪ್ರತೀ ಕೇಂದ್ರದಿಂದಲೂ ೪ ಜನರ ಗುಂಪು ಭಾಗವಹಿಸಬಹುದಾಗಿದ್ದ ರಸಪ್ರಶ್ನೆಗೆ ಎಲ್ಲಾ ಕೇಂದ್ರಗಳಿಂದಲೂ ಸ್ಪರ್ಧಿಗಳಿದ್ದರು. ರಸಪ್ರಶ್ನೆ ಎರಡು ಹಂತಗಳಲ್ಲ್ಲಿ ನಡೆಯಿತು. ಮೊದಲನೆಯ ಹಂತದಲ್ಲಿ ಪ್ರತೀ ಗುಂಪಿನ ನಾಲ್ಕೂ ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಪತ್ರಿಕೆಗಳನ್ನು ನೀಡಿ ಉತ್ತರಿಸಲು ೩೦ ನಿಮಿಷಗಳ ಕಾಲಾವಕಾಶ ನೀಡಲಾಗಿತ್ತು. ನಂತರ ಅವುಗಳ ಮೌಲ್ಯಮಾಪನ ನಡೆಸಿ ಅಗ್ರ ೬ ತಂಡಗಳನ್ನು ಎರಡನೆಯ ಹಂತಕ್ಕೆ ಕಳುಹಿಸಲಾಯಿತು. 
ಎರಡನೆಯ ಹಂತದಲ್ಲಿ ನಾಲ್ಕು ಸುತ್ತುಗಳು. ೧. ಪ್ರಶ್ನೋತ್ತರ ೨. ಸ್ಥಳಗಳನ್ನು ಗುರುತಿಸುವುದು, ಸರಿಯಾಗಿ ಗುರುತಿಸಿದರೆ ಮತ್ತೆ ಒಂದು ಬೋನಸ್ ಪ್ರಶ್ನೆ ೩. ವ್ಯಾಖ್ಯಾನದ ಹೌದು / ಇಲ್ಲ. ಹಾಗೂ ಅದರ ಸರಿಯಾದ ರೂಪ. ೪. ತೀಕ್ಷ್ಣ ಪ್ರತಿಕಿಯೆ ಬಯಸುವ ಸುತ್ತು.
ರಸಪ್ರಶ್ನೆಯಲ್ಲಿ ಕೇವಲ ಪ್ರಶ್ನೋತ್ತರಗಳಲ್ಲದೆ ವಿಷಯ ವಿಸ್ತಾರಕ್ಕೂ ಗಮನಕೊಟ್ಟಿದ್ದು ವಿಶೇಷ. "ಅಶ್ವತ್ಥಾಮ ಹತಃ ಕುಂಜರಃ" ಎಂಬ ವಾಖ್ಯದ ಸಂದರ್ಭವನ್ನು ಸಂಪೂರ್ಣವಾಗಿ ವಿವರಿಸಿದ ಪ್ರತಿಭೆಗಳೂ ಅಲ್ಲಿದ್ದರು.

ಸಮೂಹ ಗಾನ:
ಒಂದು ತಂಡವಾಗಿ ತಮ್ಮ ಗಾಯನ ಪ್ರತಿಭೆ ಹೊರಹಾಕಲು ಕೊಟ್ಟ ವೇದಿಕೆ ಸಮೂಹ ಗಾನ. 


ಬೀದಿ ನಾಟಕ:
ಅಭಿನಯ ಚಾತುರ್ಯ ಪ್ರದರ್ಶನಕ್ಕೆ ತಕ್ಕ ವೇದಿಕೆ ನಾಟಕ. ಬೀದಿ ನಾಟಕ ಸ್ಪರ್ಧೆಯಲ್ಲಿ ಇದುವರೆಗೂ ಪ್ರದರ್ಶನವಾಗದ ನಾಟಕಗಳ ಪ್ರದರ್ಶನ ನಿಯಮವಿತ್ತು. ಪ್ರತೀ ತಂಡವೂ ಸಾಮಾಜಿಕ ಸಮಸ್ಯೆಗಳಿಗೆ (ಮೂಢನಂಬಿಕೆ ವಿರೋಧೀ ಜಾಗೃತಿ, ತಮ್ಮ ವೃತ್ತಿಧರ್ಮ ಪಾಲಿಸಬೇಕು ಎಂಬ ಅಂಶ, ಭ್ರಷ್ಟಾಚಾರ ವಿರೋಧಿ ಅಂಶ) ಒತ್ತುಕೊಟ್ಟು ನಾಟಕ ಪ್ರದರ್ಶಿಸಿದರು. ಪ್ರತೀ ನಾಟಕವೂ ವಿಭಿನ್ನವಾಗಿತ್ತು.


ಯೋಗ ಪ್ರದರ್ಶನ:
ದೇಹಕ್ಷಮತೆ ಕಾಪಾಡುವಲ್ಲಿ ಯೋಗ ಪ್ರಾಣಾಯಾಮಗಳು ಮುಖ್ಯ ಪಾತ್ರವಹಿಸುತ್ತವೆ. ನಿತ್ಯ ಜೀವನದಲ್ಲಿ ಯೋಗಾಸನಗಳಿಗೂ ಸ್ಥಾನ ಕೊಟ್ಟಿರುವ ಹಲವು ಕುಟುಂಬಗಳು ಈಗಲೂ ಇವೆ. ಯೋಗ ಸ್ಪರ್ಧೆಯಲ್ಲಿ ಕಠಿಣವಾದ ಆಸನಗಳನ್ನು ಸಹ ನಿರಾಯಾಸವಾಗಿ ಪ್ರತಿಭೆಗಳು ಪ್ರದರ್ಶಿಸಿದರು. 

ಗೀತಾಪಠಣ:
ನ್ಯಾಯಾಲಯದಲ್ಲೂ ಗೀತೆಯ ಮೇಲೆ ಪ್ರಮಾಣ ಮಾಡುವವರೆಗೆ ಭಗವದ್ಗೀತೆಗೆ ಪ್ರಾಮುಖ್ಯವಿದೆ. ತರಗತಿಗಳಿಗೆ ಅನುಗುಣವಾಗಿ ವಿಂಗಡಿಸಿದ್ದ ಜೂನಿಯರ್ - ಸೀನಿಯರ್ ವಿಭಾಗಗಳಲ್ಲಿ ಗೀತೆಯ ಕೆಲವು ಶ್ಲೋಕಗಳನ್ನು ವಿದ್ಯಾರ್ಥಿಗಳು ಪಠಿಸಬೇಕಿತ್ತು.  ಹಿಂದೂ ಧರ್ಮವಲ್ಲದೇ ಅನ್ಯಧರ್ಮೀಯ ಪ್ರತಿಭೆ ಸಹ ಗೀತಾಪಠಣ ಮಾಡಿದ್ದು ವಿಶೇಷ. 

ಸಮೂಹ ನೃತ್ಯ:
ಕಲಾಚೇತನದ ಪ್ರತಿಭಾನ್ವೇಷಣೆಯಲ್ಲಿ ಮುಖ್ಯವಾದ ಕಾರ್ಯಕ್ರಮ ಸಮೂಹ ನೃತ್ಯ. ಪ್ರತೀ ಸೇವಾಕೇಂದ್ರದಿಂದ ೮ ಜನರ ಒಂದು ತಂಡವನ್ನು ಈ ಸ್ಪರ್ಧೆಗೆ ಕಳುಹಿಸಬಹುದಾಗಿತ್ತು. ಜನಪ್ರಿಯ ಹಾಡುಗಳಿಗೇ ಸ್ವಲ್ಪ ವಿಭಿನ್ನ ರೀತಿಯ ನೃತ್ಯ ಸಂಯೋಜನೆಯಿಂದ ಈ ಸ್ಪರ್ಧೆ ಗಮನಸೆಳೆಯಿತು.


ಎಲ್ಲಾ ಸ್ಪರ್ಧೆಗಳ ನಂತರ ಬಹುಮಾನ ವಿತರಣೆ. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ತಮ್ಮ ಕಿರು ಭಾಷಣದೊಂದಿಗೆ ಕಾರ್ಯಕ್ರಮವನ್ನು ಶ್ಲಾಘಿಸಿದರು. ಬಹುಮಾನ ವಿತರಣೆಯಲ್ಲಿ ವಿದ್ಯಾರ್ಥಿಗಳ ಕುತೂಹಲ ವರ್ಣಿಸಲಸದಳ.

ಇಡೀ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸ್ವಯಂಸೇವಕರು ಮತ್ತು Our School ಶಾಲೆಯ ಸಹಯೋಜನೆ ಉತ್ತಮವಾಗಿತ್ತು. ಇಂಥ ಒಳ್ಳೆಯ ಕಾರ್ಯಕ್ರಮ ಆಯೋಜಿಸಿದ ವಿದ್ಯಾಚೇತನಕ್ಕೆ ನನ್ನ ನಮನ.

Photo Credits: Mayur and Santosh Sahoo

Wednesday, December 3, 2014

ಇದೇ ನನ್ನ ಉತ್ತರ (ಹೂವಿನೊಂದಿಗೆ ನಾರು)

ಕನ್ನಡದ ಏಕೈಕ ಸರಸ್ವತಿ ಸಮ್ಮಾನ್ ನಮ್ಮ ಒಲುಮೆಯ ಎಸ್ಎಲ್‌ಬಿ. (೨೦೧೧ರಲ್ಲಿ ಕನ್ನಡಕ್ಕೆ ಸರಸ್ವತಿ ಸಮ್ಮಾನ್ ಎಸ್. ಎಲ್. ಭೈರಪ್ಪನವರ ಮುಖಾಂತರ ಒಲಿಯಿತು.) ಈ ಮೇರು ವ್ಯಕ್ತಿತ್ವ ಹೊಂದಿರುವ ಭೈರಪ್ಪನವರೊಂದಿಗೆ ಸಮಯ ಕಳೆಯುವುದು ಎಂಥವರಿಗೂ ರೋಮಾಂಚನ ಉಂಟು ಮಾಡುವಂಥದ್ದು. ನವಂಬರ್ ೨೩ರಂದು ಮೈಸೂರಿನ NIE ಕಾಲೇಜಿನಲ್ಲಿ ಅನೌಪಚಾರಿಕ ಸಂವಾದವನ್ನು ಏರ್ಪಡಿಸಿದ್ದು Dr. S L Bhyrappa Kadambari Priyara Koota ಎಂಬ facebook ಗುಂಪು. ಆಯ್ದ ೧೨೦ ಜನರ ಒಂದು ಕಾರ್ಯಕ್ರಮದಲ್ಲಿ ಡಾ॥ ಎಸ್. ಎಲ್. ಭೈರಪ್ಪನವರು ತಮ್ಮ ಅನಾರೋಗ್ಯದ ನಡುವೆಯೂ ಜನರ ಪ್ರಶ್ನೆಗಳಿಗೆ ಉತ್ತರಿಸಿದರು.  ಈ ಮೂರು ತಾಸುಗಳ ಕಾರ್ಯಕ್ರಮದಲ್ಲಿ ನನ್ನ ಪ್ರಶ್ನೆಗಳಿಗೂ ಉತ್ತರಿಸಿದ್ದು ಮರೆಯಲಾರದ ಅನುಭವ. 

ಕಾರ್ಯಕ್ರಮಕ್ಕೆ ೩೦ ನಿಮಿಷ ಮುಂಚಿತವಾಗಿಯೆ ನಮ್ಮ ಪ್ರಶ್ನೆಗಳನ್ನು ಬರೆಯಬೇಕಿತ್ತು. ಏನು ಕೇಳುವುದು ? ಕೇಳಲೇಬೇಕೇ ? ಈ ಪ್ರಶ್ನೆಗಳು ಬೇರೆಯವರೂ ಕೇಳಿರಬಹುದಲ್ಲಾ ... ಹೀಗೆ ಹಲವು ಪ್ರಶ್ನೆಗಳು ನನ್ನಲ್ಲಿ. ಒಂದೆರಡು ತಾಸು ಯೋಚಿಸಿದ ನಂತರ (ಸಾಮಾನ್ಯವಾಗಿ) ಯಾರೂ ಕೇಳಿರದ ಪ್ರಶ್ನೆಗಳು ಸಿದ್ದವಾದವು !!


ಪ್ರಶ್ನೆಗಳ ಹಿನ್ನೆಲೆ:
ಬೇರೆ ಮಾಧ್ಯಮಗಳಿಲ್ಲದ ಕಾಲದಲ್ಲಿ ಪುಸ್ತಕವೇ ಜನರ ಮಿತ್ರ. ಈಗ ಆ ಮಿತ್ರನ ಸ್ಥಾನ ಸ್ಮಾರ್ಟ್ ಫೋನ್, ಟ್ಯಾಬ್, ಲ್ಯಾಪ್‌ಟಾಪ್ ಮುಂತಾದವು ಆಕ್ರಮಿಸಿವೆ. ಕನ್ನಡದ ಬಗ್ಗೆ ಅಭಿಮಾನ ಶೂನ್ಯತೆ ಆವರಿಸಿ ಮಾತೃಭಾಷೆ ಕನ್ನಡವಾಗಿದ್ದರೂ ಮನೆ ಭಾಷೆ ಇಂಗ್ಲೀಷ್ ಆಗುತ್ತಿರುವ ಕಾಲ. ಕೆಲವರಿಗೆ ಆಸಕ್ತಿ ಇದ್ದರೂ ಇತರೆ ಕಾರಣಗಳಿಂದ (ಸಮಯ, ಕಣ್ಣಿನ ತೊಂದರೆ, ವೃದ್ದಾಪ್ಯ) ಓದಲು ಸಾದ್ಯವಾಗದಿರಬಹುದು. ಜನರಲ್ಲಿ ಓದಿನ ಆಸಕ್ತಿ ಕಡಿಮೆಯಾಗಿರುವುದು ಸತ್ಯ (ನನ್ನನ್ನೂ ಸೇರಿ); ಓದಿನ ಸುಖ ಅನುಭವಿಸುವವರ ಸಂಖ್ಯೆ ಶೂನ್ಯವೂ ಆಗಿರಬಹುದು. ಹೀಗಿರುವಾಗ ಕನ್ನಡ ಪುಸ್ತಕಗಳನ್ನು ಮುಂದಿನ ಪೀಳಿಗೆಯವರು ಓದುತ್ತಾರೆ ಎಂದು ಹೇಗೆ ಹೇಳುವುದು. ನಮ್ಮ ಹಾಗೂ ಮುಂದಿನ ಪೀಳಿಗೆಗೆ ಬೇರೆ ಮಾಧ್ಯಮಗಳ ಮೂಲಕ ಓದಿನ ರುಚಿ ಹತ್ತಿಸಬೇಕಾದ ಅನಿವಾರ್ಯತೆ ಒದಗಿದೆ.  

ಬೇರೆ ಮಾಧ್ಯಮಗಳು ಎಂದ ಕೂಡಲೆ ನೆನಪಾಗುವುದು ದೃಶ್ಯ ಮಾಧ್ಯಮ, ಶ್ರಾವ್ಯ ಮಾಧ್ಯಮ ಹಾಗೂ ಪತ್ರಿಕೋದ್ಯಮ. ಶ್ರಾವ್ಯ ಮಾಧ್ಯಮವನ್ನು ಬಳಸಿ audio book ಮಾಡಬಹುದು. ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಬಹುದು. 
ದೃಶ್ಯ ಮಾಧ್ಯಮದಲ್ಲಿ ಮತ್ತೆ ಕವಲುಗಳು; ದೂರದರ್ಶನ ಮತ್ತು ಸಿನಿಮಾ. ಸಿನಿಮಾ ವಿಭಾಗಕ್ಕೆ ಬಂದರೆ ಕಾದಂಬರಿ ಆಧಾರಿತ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಎಂದೇ ಹೇಳಬಹುದು. ಓದಿಗೇ ಸೀಮಿತವಾಗುವಂತ ಬೆಳದಿಂಗಳ ಬಾಲೆ ಕಾದಂಬರಿಯನ್ನೂ ಸಿನಿಮಾ ಮಾಡಿದ ಕಲೆಗಾರರು ಕನ್ನಡದಲ್ಲಿದ್ದಾರೆ. ಕೆಲವು ಕಾದಂಬರಿ / ಪುಸ್ತಕಗಳು ಧಾರಾವಾಹಿಯಾಗಿ ಕೂಡ ಬಂದಿವೆ. ಒಂದು ಕೃತಿ ದೃಶ್ಯ ಮಾಧ್ಯಮಕ್ಕೆ ಬಂದರೆ ಅದರ ಲೇಖಕರಿಗೆ ಅದು ತೃಪ್ತಿ ತಂದಿರುತ್ತದೆಯೇ ಎಂಬುದು ಪ್ರಶ್ನೆ. ವಿಷ್ಣುವರ್ಧನ್, ಅಂಬರೀಶ್, ಧೀರೇಂದ್ರ ಗೋಪಾಲ್ ಅವರುಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ ನಾಗರಹಾವು ಚಿತ್ರ ತ.ರಾ.ಸು. ಅವರ ಕಾದಂಬರಿ ಆಧಾರಿತ ಚಿತ್ರ. ಆದರೆ ಅದು ತರಾಸು ಅವರಿಗೆ ತೃಪ್ತಿ ತಂದಿರಲಿಲ್ಲ (ಒಳ್ಳೆ ಕೇರೆ ಹಾವು ಇದ್ದಂತಿದೆ ಎಂದರಂತೆ). 
ಭೈರಪ್ಪನವರ ಕಾದಂಬರಿಗಳಾದ ವಂಶವೃಕ್ಷ, ನಾಯಿನೆರಳು, ಮತದಾನ ಸಿನಿಮಾಗಳಾಗಿದ್ದರೆ ಗೃಹಭಂಗ ಧಾರಾವಾಹಿಯಾಗಿ ಲಭ್ಯವಿದೆ. ಇವುಗಳ ಬಗ್ಗೆ ಅವರ ಅಭಿಪ್ರಾಯ ತಿಳಿಯುವ ಕುತೂಹಲ ನನ್ನದು.

ಪ್ರಶ್ನೆ ಹಾಗೂ ಉತ್ತರ
ಪ್ರಶ್ನೆಃ ಜನರಲ್ಲಿ ಓದಿನ ಆಸಕ್ತಿ ಕಡಿಮೆಯಾಗಿದೆ / ಕಡಿಮೆಯಾಗುತ್ತಿದೆ. ಅದರ ಜೊತೆಯಲ್ಲಿಯೇ ಕಾದಂಬರಿ ಪ್ರಕಾರ / ನೀಳ್ಗತೆಗಳು ಕಡಿಮೆಯಾಗಿವೆ. ಹಳೆಯ / ಹೊಸ ಬರಹಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವುದರಿಂದ ಹೆಚ್ಚು ಜನರನ್ನು ತಲುಪಬಹುದು ಎಂದು ನಿಮಗೆ ಅನಿಸುತ್ತದೆಯೇ? ಈವರೆಗೆ ದೃಶ್ಯ ಮಾಧ್ಯಮಕ್ಕೆ ಬಂದಿರುವ ನಿಮ್ಮ ಬರಹಗಳು ನಿಮಗೆ ತೃಪ್ತಿ ತಂದಿದಿಯೇ ? ನಿಮ್ಮ ಯಾವ ಕಾದಂಬರಿಯನ್ನು ದೃಶ್ಯ ಮಾಧ್ಯಮದಲ್ಲಿ ನೋಡಲು ಬಯಸುತ್ತೀರಿ, ಹಾಗೂ ಅದರ ನಿರ್ದೇಶಕರು ಯಾರಾಗಿದ್ದರೆ ಚೆನ್ನ ?

ಉತ್ತರಃ ನನ್ನ ಯಾವ ಕಾದಂಬರಿಯನ್ನೂ ದೃಶ್ಯ ಮಾಧ್ಯಮದಲ್ಲಿ ಬರಬೇಕು ಅನ್ನುವ ಬಯಕೆ ನನಗೆ ಇಲ್ಲ. ಯಾರಾದರೂ ಅದನ್ನು ಮಾಡ್ತೀವಿ ಎಂದು ಬಂದರೆ ಅವರ ಹಿಂದಿನ ಕೃತಿಗಳನ್ನು ನೋಡಿ ಹೇಳುತ್ತೇನೆಯೇ ಹೊರತು ದೃಶ್ಯ ಮಾಧ್ಯಮದಲ್ಲಿ ನನ್ನ ಕಾದಂಬರಿ ಬರುವುದರಿಂದ ನನಗೆ ಯಾವುದೇ ರೀತಿಯ ಅನುಕೂಲ ಇಲ್ಲ, ನನ್ನಿಂದ ಅವರಿಗೆ ಅನುಕೂಲವಾಗುತ್ತೆ, ಏಕೆಂದರೆ,  ಪ್ರಾರಂಭದಲ್ಲಿಯೇ ಅವರಿಗೆ ಒಂದು ಪಬ್ಲಿಸಿಟಿ ಇರುತ್ತೆ. ಅಷ್ಟೆ. ಅದೇ ಬೇರೆ, ಇದೇ ಬೇರೆ. ಓದುವಾಗ ಓದುಗನಿಗೆ ಅವನ ಕಲ್ಪನೆಗೆ ತುಂಬಾ ಅವಕಾಶ ಇರುತ್ತೆ. ಆ ದೃಶ್ಯ ಮಾಧ್ಯಮದಲ್ಲಿ ಅವರು ಏನು ತೋರಿಸಿರುತ್ತಾರೊ ಅಲ್ಲಿಗೆ ಹಿಡಿದು ನಿಂತುಬಿಡುತ್ತೆ. ಹಾಗೂ ಅದು ನನ್ನ ಕ್ಷೇತ್ರವೂ ಅಲ್ಲ.

ಕಾರ್ಯಕ್ರಮದ ವೀಡಿಯೋ